Gadag Sahitya Sammelana

I wrote an article for the Kannada lit website wwww.Kendasampige.com

http://www.kendasampige.com/article.php?id=3094


-ಗದಗ್ ಸಾಹಿತ್ಯ ಸಮ್ಮೇಳನ

ಗಂಡಸರ ಮೂತ್ರವೇನು ಗೊಮೂತ್ರವೇ?

ಗದಗಿನಲ್ಲಿ ನಡೆದ ೭೬ನೇ ಸಾಹಿತ್ಯ ಸಮ್ಮೇಳನದ ಬಗೆಗಿನ ಯಾವುದೇ ಲೇಖನಕ್ಕೆ ಕೊಡಬಹುದಾದ ಅತಿ ಉತ್ತಮ ಟೈಟಲ್ ಅಂದರೆ ಇದು.
ಈ ಮಾತನ್ನು ಹೇಳಿದವರು ಗುಲ್ಬರ್ಗಾದ ಸಾಹಿತಿ ಹಾಗು ಮಹಿಳಾ ಹೋರಾಟಗಾರ್ತಿ ಮಲ್ಲಿಕಾ ಘಂಟಿ ಅವರು.
ಗಂಡಸರು ಗೋವುಗಳಂತೆ ಸಾಧೂ ಪ್ರಾಣಿಗಳೆಂದೂ, ಅವರಿಗೆ ಸಂಬಂಧ ಪಟ್ಟ ಎಲ್ಲ ವಸ್ತುಗಳೂ ಪವಿತ್ರವೆಂದೂ ಇದರ ಅರ್ಥ ಖಂಡಿತ ಅಲ್ಲ.
ಮಹಿಳೆ ಮತ್ತು ಬದುಕು ಎಂಬ ಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಂಗಸರು ಹಾಗೂ ಗಂಡಸರು ಬಳಸುವ ಶೌಚಾಲಯ ಗಳಲ್ಲಿ ನಡೆಯುವ ತಾರತಮ್ಯದ ಬಗ್ಗೆ
ತಿಳಿಸುವಾಗ ಈ ಕಣ್ಣಿಗೆ ಕಟ್ಟುವಂಥಹ ಉದಾಹರಣೆ ನೀಡಿದರು.
'' ಗಂಡಸರ ಶೌಚಾಲಯಗಳಲ್ಲಿ ಮೂತ್ರಕ್ಕೆ ಶುಲ್ಕ ಇಲ್ಲ. ಸಂಡಾಸಕ್ಕೆ ಮಾತ್ರ ಇದೆ. ಆದರೆ ಹೆಂಗಸರ ಶೌಚಾಲಯಗಳಲ್ಲಿ ಮೂತ್ರಕ್ಕೂ ದುಡ್ಡು ಕೊಡಬೇಕು. ಬಡ ಹಳ್ಳಿಯ ಹೆಣ್ಣು ಮಕ್ಕಳ ಹತ್ತಿರ ಊಟಕ್ಕೇ ಕಾಸಿರುವುದಿಲ್ಲ. ಅಂಥದ್ದರಲ್ಲಿ ಮೂತ್ರಕ್ಕೆ ಹಣ ಕೊಡಿ ಎಂದರೆ ಹೆಂಗೆ ? ಅಷ್ಟಕ್ಕೂ ಈ ಬೇಧಭಾವ ಏಕೆ?
ಗಂಡಸರ ಮೂತ್ರವೇನು ಗೊಮೂತ್ರವೇ?'' ಎಂದು ಅವರು ಕೇಳಿದ್ದು.

ನಲ್ಲಿ ನೀರು
ಇನ್ನು ಸಮ್ಮೇಳನ ಅಧ್ಯಕ್ಷರೊಡನೆ ಸಂವಾದದಲ್ಲಿ ನೆನಪಿನಲ್ಲಿ ಉಳಿವಂಥಹ ಮಾತು ಗಳನ್ನು ಆಡಿದವರು ಸಾಹಿತಿ ಮೀನಾಕ್ಷಿ ಬಾಳಿ.
`` ಹೆಣ್ಣಿನ ಶೋಷಣೆ ನಿಲ್ಲಲ್ಲ. ನಿಲ್ಲಿಸಲು ಅದೇನು ಕಾರ್ಪೋರೇಶನ್ ನಲ್ಲಿಯ ನೀರಲ್ಲ'' ಎಂದರು ಅವರು. 'ಹೈದರಾಬಾದ್ ಕರ್ನಾಟಕ ದಲ್ಲಿ ಮೊದಲ ಬಾರಿಗೆ ಸೀರೆಗೆ ಕ್ಲಿಪ್ ಹಾಕಿ ತುಟಿಗೆ ಲಿಪ್ ಸ್ಟಿಕ್ ಹಾಕಿದ ಮೊದಲ ಮಹಿಳೆ ಗೀತಕ್ಕ` ಎಂದು ಅಧ್ಯಕ್ಷರನ್ನು ಬಾಳಿ ಅವರು ಬಣ್ಣಿಸಿದರು

ಮೌಲಿಕ ಪ್ರಶ್ನೆ
೧೯೧೫ ರಿಂದ ಕೇಳುತ್ತ ಬರಲಾದ ಪ್ರಶ್ನೆ ಯನ್ನೂ ಈ ಸಮ್ಮೇಳನದಲ್ಲೂ ಕೇಳಲಾಯಿತು. ''ಸಮ್ಮೇಳನದ ಅವಶ್ಯಕತೆ ಏನು? ಇದನ್ನು ಕೆಲವರು ಜಾತ್ರೆ, ಸಂತೆ ಎಂದೆಲ್ಲ ಟೀಕೆ ಮಾಡುತ್ತಾರೆ. ಇದು ಬೇಕೇ? ಇದಕ್ಕೆ ಇಷ್ಟು ಖರ್ಚು ಮಾಡಬೇಕೆ?'' ಎಂಬೆಲ್ಲ ಪ್ರಶ್ನೆ ಗಳು ಇಲ್ಲಿ ಮೂಡಿ ಬಂದವು. ಇವನ್ನು ಈ ಬಾರಿ ಖುದ್ದು ಕಸಾಪ ಅಧ್ಯಕ್ಷರಾದ ನಲ್ಲೂರು ಪ್ರಸಾದ್ ಆರ್ ಕೆ ಅವರೇ ಕೇಳಿದರು. ``ಇದಕ್ಕೆಲ್ಲ ನಾನು ಗಂಭೀರ ಉತ್ತರ ಕೊಡುತ್ತೇನೆ'' ಎಂದು ಮಾತು ಆರಂಭಿಸಿದರು. ಹಳೆಯ ಸಮ್ಮೇಳನ ಗಳ ಉದಾಹರಣೆ ನೀಡುತ್ತಾ ಅರ್ಧ ಗಂಟೆ ಭಾಷಣ ಮಾಡಿದರು. ಕೊನೆಗೆ `ಇದನ್ನು ಸಂತೆ ಎನ್ನಿ, ಜಾತ್ರೆ ಎನ್ನಿ, ಕನ್ನಡದ ಹೆಸರಿನಲ್ಲಿ ಇಷ್ಟು ಜನ ಸೇರುತ್ತರಲ್ಲ, ಅದೇ ಮುಖ್ಯ' ಎಂದರು. ಹೀಗೆನ್ನುವದರ ಮೂಲಕ ಕಳೆದ ೯೫ ವರ್ಷ ದಿಂದ ನಡೆದು ಬಂದ ಸತ್ ಸಂಪ್ರದಾಯವನ್ನು ಮುಂದಿನ ಸಮ್ಮೇಳನ ದಲ್ಲೂ ಮುಂದುವರೆಸಲು ಅನುಕೂಲ ಮಾಡಿ ಕೊಟ್ಟರು. ಮುಂದಿನ ವರ್ಷ ಬೆಂಗಳೂರಿನ ಸಮ್ಮೇಳನ ದಲ್ಲೂ ಇಂತಹ ಪ್ರಶ್ನೆ ಗಳನ್ನು ಕೇಳಬಹುದು ಎಂಬ ಆಶಾಭಾವನೆ ಯನ್ನು
ಸಾಹಿತಿ, ಚಿಂತಕರಲ್ಲಿ ಮೂಡಿಸಿದರು.

ಬಿ ಎಸ್ ವಾಯ್ ಮತ್ತು ಸೈಕಲ್
ಸಾಹಿತ್ಯ ಸಮ್ಮೇಳನ ಕ್ಕೆ ಗೈರು ಹಾಜರಾಗಿದ್ದ ಮುಖ್ಯ ಮಂತ್ರಿ ಬಿ ಎಸ್ ಯಡ್ಯೂರಪ್ಪ ಅವರು ಇಂದೋರಿನಲ್ಲಿದ್ದರು. ಪಕ್ಷದ ಕಾರ್ಯಕಾರಿಣಿ ಯಲ್ಲಿ ಭಾಷಣ ಕೇಳಿದ ನಂತರ ಸ್ವಲ್ಪ ಹೊತ್ತು ಸೈಕಲ್ಲು ಹೊಡೆದರು. ಮೊದಲ ದಿನ ಅನಂತ ಕುಮಾರ ಅವರು ಸೈಕಲ್ಲು ಹೊಡೆದಿದ್ದ ಚಿತ್ರ ಪತ್ರಿಕೆ ಗಳಲ್ಲಿ ಬಂದ ಮೇಲೆ ಮರು ದಿನ ಬಿ ಎಸ್ ವಾಯ್ ಅವರ ಫೋಟೋ ಬರದೆ ಇರುತ್ತದೆಯೇ?

ಯಾರು ಯಾರ ಪರ?
''ಪ್ರತೀ ಸಾರಿ ಉದ್ದುದ್ದ ಭಾಷಣ ಕೇಳುವ ದುಸ್ಥಿತಿಯಿಂದ ನಮ್ಮನ್ನು ಪಾರು ಮಾಡು'' ಎನ್ನುವ ಪತ್ರಕರ್ತರ ಮೊರೆಯನ್ನು ದಯಾಮಯನಾದ ದೇವರು ಕೇಳಿದ್ದ ಎನಿಸುತ್ತದೆ.
ಆದ್ದರಿಂದಲೇ ಗದಗಿನ ಸಮ್ಮೇಳನದಲ್ಲಿ ಅಧ್ಯಕ್ಷ ರಾದ ಗೀತ ನಾಗಭೂಷಣ್ ಅವರು ಕೇವಲ ೧೫ ಪುಟಗಳ ಭಾಷಣ ಮಾಡಿದರೇನೋ. ಹಿಂದಿನ ಅಧ್ಯಕ್ಷರಂತೆ ೬೦-೭೦ ಪುಟಗಳ ಭಾಷಣ ಮಾಡಲಿಲ್ಲ. ಗೀತಕ್ಕ ಅವರು ಥೇಟ್ ಅಮೆರಿಕ ಮಾಜಿ ಅಧ್ಯಕ್ಷ ಜಾರ್ಜ್ ಬುಶ್ ರಂತೆ `ಯು ಆರ್ ವಿಥ್ ಅಸ್ ಆರ್ ಅಗೆನ್ಸ್ಟ್ ಅಸ್' ಎಂದು ಸಾಹಿತಿಗಳಿಗೆ ನೀವು ಯಾರ ಪರ ಎಂದು ಕೇಳಿದರು. ಸುದ್ದಿಗಾರರಿಗೆ ಅಧ್ಯಕ್ಷರ ಭಾಷಣದಲ್ಲಿ ಸುದ್ದಿ ಏನು ಎಂದು ಹುಡುಕುವ ತಾಪತ್ರಯ ಇಲ್ಲದಂತೆ ಮಾಡಿದರು.

ಮಗಧೀರನ ಡಯಾಲಾಗ್
ಇನ್ನು `ಗದಗ್ ಜಿಲ್ಲೆಯ ಮಗಧೀರ' ಎಂದೇ ಹೆಸರು ಪಡೆದಿರುವ ಉಸ್ತುವಾರಿ ಸಚಿವ ಶ್ರೀರಾಮುಲು ಅವರು ಅತ್ಯಂತ ಸಣ್ಣ ಹಾಗೂ ರಂಜನೀಯ ಭಾಷಣ ಮಾಡಿದರು. ಬಿ ಎಸ್ ವಾಯ್ ಅವರ ಗೈರು ಹಾಜರಾತಿಯಲ್ಲಿ ಅವರೇ ಈ ಕೆಲಸ ಮಾಡಬೇಕಾಗಿ ಬಂತು. ದೊಡ್ಡ ಅಕ್ಷರಗಳಲ್ಲಿ ಅವರು ಎರಡು ಪುಟದ ಭಾಷಣ ಬರೆದುಕೊಂಡು ಬಂದಿದ್ದರು. ಆದರೆ ಕನ್ನಡ ಹಾಗೂ ತೆಲುಗು ಭಾಷೆ ಲಿಪಿ ಒಂದೇ ಇರುವುದಕ್ಕೋ ಅಥವಾ ಅಕ್ಷರಗಳು ಸ್ವಲ್ಪ ಸಣ್ಣದಾಗಿದ್ದಕ್ಕೋ ಅವರು ಕೆಲವು ಶಬ್ದಗಳನ್ನು ತಪ್ಪಾಗಿ ಓದಿದರು. ಉದಾಹರಣೆಗೆ ಅವರ ಭಾಷಣದಲ್ಲಿ `ಲಘು' ಹೋಗಿ `ನಗು' ಆಯಿತು. `ನೆರೆ ಪರಿಹಾರ', `ಮರೆ ಪರಿಹಾರ' ಆಯಿತು. (ಸರಕಾರ ನೆರೆಯನ್ನು ಮರೆತರೂ ಜನ ಮರೆತಿಲ್ಲ ಎಂದು ಇದರ ಅರ್ಥವಲ್ಲ.)

ಚಿನ್ನದ ಕಿರೀಟ
ಇನ್ನೊಂದು ಸ್ವಾರಸ್ಯಕರವಾದ ವಿಷಯವೆಂದರೆ ಗೀತಕ್ಕ ಅವರು ಜಿಲ್ಲಾ ಸಚಿವ ಶ್ರೀ ರಾಮುಲು ಅವರನ್ನು ''ನನ್ನ ತಮ್ಮ'' ಎಂದು ಕರೆದಿದ್ದು. ತಮ್ಮ ಎಂದಿನ ಕೆಚ್ಚಿ ನಿಂದ ಕ್ರಾಂತಿಕಾರಿ ಭಾಷಣ ಮಾಡಿದ ಅಧ್ಯಕ್ಷರು ಶ್ರೀ ರಾಮುಲು ಅವರಿಗೆ ಒಂದು ಸಲಹೆ ನೀಡಿದರು. ''ಜ್ಞಾನ ಪೀಠ ಪ್ರಶಸ್ತಿಗೂ ಮಿಗಿಲಾದ ಒಂದು ಸಾಹಿತ್ಯ ಪ್ರಶಸ್ತಿ ಯನ್ನು ಇವರು ಸ್ಥಾಪಿಸಬೇಕು. ಶ್ರೀ ರಾಮುಲು ಅವರು ಮನಸು ಮಾಡಿದರೆ ಅವರಿಗೆ ಇದು ಕಷ್ಟವಲ್ಲ. ಅವರ ಅರ್ಧ ದಿನದ ಅಥವಾ ಕಾಲು ದಿನದ ಆದಾಯವನ್ನು ನೀಡಿದರೂ ಸಾಕು, ಬೇಕಾದಷ್ಟು ಆದೀತು'' ಎಂದರು.
''ತಮ್ಮ ಭಾಷಣದಲ್ಲಿ ಸರಕಾರದ ಕಾರ್ಯಕ್ರಮಗಳನ್ನು ಉಗ್ರವಾಗಿ ಖಂಡಿಸಿದ ಅಧ್ಯಕ್ಷರು ಮಂತ್ರಿಯೊಬ್ಬರ ಮುಂದೆ ಕೈ ಚಾಚಿ ನಿಂತು ಹಣ ಕೇಳ ಬಾರದಿತ್ತು'' ಎಂದು ಅನೇಕರು ಟೀಕಿಸಿದರು. ``ಗಣಿ ಧಣಿ ಗಳಿಂದ ಭುವನೇಶ್ವರಿಗೆ ಚಿನ್ನದ ಕಿರೀಟ ತೊಡಿಸುವ ಅಗತ್ಯವಿದೆಯೇ`` ಎಂದು ಕೆಲವರು ಪತ್ರಕರ್ತರು ಕೇಳಿದ ಲೀಡಿಂಗ್ ಪ್ರಶ್ನೆಗಳಿಗೆ ಅದೇ ಶಬ್ದ ಗಳನ್ನು ಉಪಯೋಗಿಸಿ ಕೆಲ ಸಾಹಿತಿಗಳು ಪ್ರತಿಕ್ರಿಯೆ ನೀಡಿದರು.

ಈ ಪ್ರಶ್ನೆ ಮರು ದಿನ ನಡೆದ ಸಮ್ಮೇಳನ ಅಧ್ಯಕ್ಷರೊಂದಿಗೆ ಸಂವಾದ ದಲ್ಲಿ ಮತ್ತೆ ಮತ್ತೆ ಬಂತು. ಅಧ್ಯಕ್ಷರು ಸ್ಪಷ್ಟನೆ ನೀಡಿದರು`` ನಾನು ಸಚಿವರು ಪ್ರಶಸ್ತಿ ನೀಡಲಿ ಎಂದು ಕೇಳಿಲ್ಲ. ಸರಕಾರದ ಪ್ರತಿನಿಧಿ ಯಾಗಿ ಅವರು ಪ್ರಯತ್ನ ಮಾಡಲಿ ಎಂದು ಅವರನ್ನು ಕೇಳಿದೆ . ಉತ್ತರ ಕರ್ನಾಟಕ ದಲ್ಲಿ ತಮಗಿಂತ ಸಣ್ಣ ವರನ್ನು ತಮ್ಮ ಎಂದು ಕರೆಯುವುದು ವಾಡಿಕೆ. ಆ ಕಾರಣದಿಂದ ಶ್ರೀ ರಾಮುಲು ಅವರನ್ನು ತಮ್ಮ ಎಂದು ಕರೆದೆನೇ ಹೊರತು ಅವರ ಕೃಪೆ ಗಿಟ್ಟಿಸಲು ಅಲ್ಲ'' ಎಂದರು. ಇಷ್ಟು ಹೇಳಿದ ಮೇಲೆಯೂ ಮರುದಿನ ಪತ್ರಿಕೆ, ಟಿವಿ ಗಳಲ್ಲಿ ಈ ವಿವಾದ ರಾರಾಜಿಸಿತು. ಇದೆಲ್ಲಕ್ಕೂ ಅಂತ್ಯ ಹಾಡುವಂತೆ ಸಮಾರೋಪ ಸಮಾರಂಭದಂದು ಗೀತಕ್ಕ ಅವರ ಕಾಲಿಗೆ ಶ್ರೀರಾಮುಲು ಅವರು ನಮಸ್ಕಾರ ಮಾಡಿದರು. ''ಗದಗಿನಲ್ಲಿ ಅಕ್ಕಂದಿರ ಕಾಲಿಗೆ ಬೀಳುವುದು, ದೆಹಲಿಯಲ್ಲಿ ತಾಯಂದಿರಿಗೆ ಕಾಲಿಗೆ ಬೀಳುವುದು,
ನಮ್ಮ ಬಳ್ಳಾರಿ ಕಡೆ ಸಂಪ್ರದಾಯ'' ಎಂದೇನೂ ಅವರೇನೂ ಸ್ಪಷ್ಟನೆ ನೀಡಲಿಲ್ಲ.

ಕಿರಿಕ್ ಇಲ್ಲದ್ದೇ ಕಿರಿಕ್
ಊಟ, ನೀರು, ಕಿಟ್ ವಿತರಣೆ, ರಾತ್ರಿ ಮಲಗುವ ವ್ಯವಸ್ಥೆ ಎಲ್ಲವೂ ಸರಿಯಾಗಿ ನಡೆಯಿತು. ಇದರಿಂದ ಸಮ್ಮೇಳನಕ್ಕೆ ಇರಲಿ ಎಂದು ತೆಗೆದಿಟ್ಟು ಕೊಂಡಿದ್ದ ಪ್ರಸನ್ನ ಅವರ ದೇಸಿ ಜುಬ್ಬಾ ಗಳನ್ನು ಹಾಕಿಕೊಂಡು ಬಂದ ಅನೇಕ ಪತ್ರಕರ್ತರಲ್ಲಿ ಕೆಲವರಿಗೆ ನಿರಾಸೆ ಆಯಿತು. `ಕಿರಿಕಿರಿ ಗಳಿಲ್ಲದಾಗ ಗೋಷ್ಠಿ ಗಳಿಗೆ ಹಾಜರಾಗಬೇಕಾಗ್ತದೆ. ಇದು ಯಾರಿಗೆ ಬೇಕಿತ್ತು?' ಎಂದು ಗೊಣಗುತ್ತಲೇ ಇವರೆಲ್ಲ ಸಮ್ಮೇಳನ ಸಭಾಂಗಣಕ್ಕೆ ತೆರಳಿದರು.

ಜನವೋ ಜನ
ಇನ್ನು ಗೋಷ್ಠಿಗಳ ಬಗ್ಗೆ ಹೇಳಬಹುದಾದ ವಿಶೇಷ ವೆಂದರೆ ಅಲ್ಲಿದ್ದ ಜನ ಜಂಗುಳಿ. ಪ್ರತಿ ಗೋಷ್ಠಿಗೂ ಎಷ್ಟು ಜನ ಇದ್ದರು ಎಂದರೆ ಸಂಘಟಕರಿಗೆ, ಭಾಷಣ ಮಾಡಲು ಬಂದವರಿಗೆ ಗಾಬರಿ ಆಯಿತು. `ಗಾಯನ, ನೃತ್ಯ ಗಳಿಗೆ ಸೇರುವಷ್ಟೇ ಜನ ಗಂಭೀರ ಗೋಷ್ಠಿಗಳಿಗೂ ಕೂಡ ಸೇರುತ್ತಿರುವುದು ಬಹಳ ಸಂತೋಷದ ವಿಷಯ' ಎಂದು ಎನ್ ಎಸ್ ಲಕ್ಷ್ಮಿ ನಾರಾಯಣ ಭಟ್ಟರು ಹೇಳಿದರು. ಆದರೆ ಕುಮಾರ ವ್ಯಾಸನನ್ನು ಕಂಡ ಗದಿಗಿನ ಜನ ಲಕ್ಷ ಗಟ್ಟಲೆ ಸಂಖ್ಯೆಯಲ್ಲಿ ಗಂಭೀರ ಗೋಷ್ಠಿಗಳಿಗೆ ಸೇರಿದ್ದು ಯಾಕೆ ಎಂದು ಒಮ್ಮೆ ವಿಚಾರ ಮಾಡಿದಾಗ ಹೊಳೆದದ್ದು ಇದು.
ಗಂಭೀರ ಎಂದು ಕರೆಸಿಕೊಳ್ಳುವ ಗೋಷ್ಠಿಗಳಲ್ಲಿ ಏನಾದರೂ ಗಂಭೀರ ಚರ್ಚೆ ನಡೆಯಬಹುದೇ ಎಂಬ ನಿರೀಕ್ಷೆ ಯಲ್ಲಿ ಜನ ಕಾಯುತ್ತಿದ್ದಿರಬಹುದು. ಅದು ಮೊದಲನೇ ಗೋಷ್ಠಿಯಲ್ಲಿ ಸಾಧ್ಯವಾಗದಾಗ ಮುಂದಿನ ಗೊಷ್ಟಿಗಾಗಿ ಕಾದಿರಬಹುದು. ಅದೂ ಆಗದೇ ಹೋದಾಗ ಅದರ ಮುಂದಿನದರಲ್ಲಿ ಕೂತಿರಬಹುದು. ಕೆಟ್ಟದಾಗಿ ಹಾಡುತ್ತಿರುವನು ಸರಿಯಾಗಿ ಹಾಡುವವರೆಗೂ ಕೇಳುಗರು ಒನ್ಸ್ ಮೋರ್ ಒನ್ಸ್ ಮೋರ್ ಎಂದು ಹೇಳಿ ಹುರಿದುಂಬಿಸಿದಂತೆ.

ಚುಟುಕು ಮತ್ತು ದುಟಾಯಿಗಿರಿ
ಕೊನೆಯದಾಗಿ ಚುಟುಕು ಬೃಹ್ಮ ಎಂದು ಬಿರುದು ಗಳಿಸಿರುವ ಸಿಪಿಕೆ ಅವರು ಭಾಷಣ ಮಾಡುವಾಗ ತಮ್ಮ ಬಿರುದನ್ನು ಮರೆತರು. ಒಂದು ಘಂಟೆಗೂ ಮೀರಿ ಭಾಷಣ ಮಾಡಿದರು. ಶ್ರೀವನಿತೆ ಯರಸನೆ ಎಂದು ಸಾವಿರ ಗಟ್ಟಲೆ ಸಾಲು ಬರೆದ ಕುಮಾರ ವ್ಯಾಸನನ್ನು ಸಹಿಸಿ ಕೊಂಡಿದ್ದ ಗದಗಿನ ಸಾಹಿತ್ಯಾಸಕ್ತರು ಸಿಪಿಕೆ ಅವರನ್ನು ಸಹಿಸಿಕೊಳ್ಳಲಿಲ್ಲ. (ಗದಗಿನ ಭಾರತಕ್ಕೂ ಸಮ್ಮೇಳನದ ಭಾಷಣಗಳಿಗೂ ಐನೂರು ವರ್ಷಗಳ ಅಂತರವಿಲ್ಲವೇ ಮತ್ತೆ?) ಇದು ಸ್ಟೇಜ್ ಮೇಲೆ ಕುಳಿತವರನ್ನು ಕೆರಳಿಸಿತು. `ಥತ್ ಏನ್ ಜನ ಮಾರಾಯ. ಕನಿಷ್ಠ ಒಂದು ಗಂಟೆ ಭಾಷಣ ಮಾಡದಿದ್ದರೆ ಹೆಂಗೆ` ಎಂದು ಕೆಲವರು ಜೋರಾಗಿಯೇ ಹೇಳಿದರು.

ಶಾಸಕರು ಹಾಗು ಮಾಜಿ ಕಬಡ್ಡಿ ಪಟು ಶ್ರೀಶೈಲಪ್ಪ ಬಿದರೂರು ಅವರು ವೇದಿಕೆಯ ಮುಂದೆ ಹೋಗಿ ಜೋರಾಗಿ ಕೂಗಿದರು. '' ಸುಮ್ಮನೆ ಕುಂದರ್ರಿ. ಸ್ಟೇಜ್ ಮ್ಯಾಲೆ ಕುಂತವರಿಗೆ ಮಾತಾಡಲಿಕ್ಕೆ ಬಿಡ್ರಿ. ಆಮ್ಯಾಲೆ ನಾನು ವದರಾಡಿದರ ದುಟಾಯಿಗಿರಿ ಮಾಡಿದಾ ಅಂತ ಅನ್ನ ಬ್ಯಾಡ್ರಿ'' ಎಂದರು. '' ದುಟಾಯಿಗಿರಿ'' ಎಂದರೆ ಏನು ಎಂದು ಹಳೆ ಮೈಸೂರು ಏರಿಯಾದ ಪತ್ರಕರ್ತರೆಲ್ಲ ಉತ್ತರ ಕರ್ನಾಟಕ ದ ಸಹೋದ್ಯೋಗಿಗಳನ್ನು ಕೇಳಿದರು. ಹಂಗಂದರೆ '' ಮೌಖಿಕ ಗುಂಡಾಗಿರಿ'' ಎಂದು ಎರಡನೆಯವರು ಮೊದಲನೆಯವರಿಗೆ ಹೇಳಿದರು. ಮೊದಲನೇ ಯವರ ಸಂಖ್ಯೆ ಕಮ್ಮಿ ಇದ್ದಿದ್ದರಿಂದ ಅದು ಅಷ್ಟೊಂದು ಸಮಸ್ಯೆ ಆಗಲಿಲ್ಲ.

ಇಲ್ಲೇ ಕಳೆದದ್ದು
ಇಷ್ಟರಲ್ಲಿ ಹಿಂದೂ ಪತ್ರಿಕೆಯ ವರದಿಗಾರ ಗಿರೀಶ್ ಪಟ್ಟಣಶೆಟ್ಟಿ ಅವರ ಕ್ಯಾಮೆರಾ ಮಿಡಿಯ ಸೆಂಟರ್ ನಲ್ಲಿ ಕಳೆದು ಹೋಯಿತು
`ಇಲ್ಲೇ ಕಳಕೊಂಡೆ, ಇಲ್ಲೇ ಕಳಕೊಂಡೆ ' ಎಂದು ಅವರು ಶರಪಂಜರ ಕಲ್ಪನಾ ಸ್ಟೈಲ್ ನಲ್ಲಿ ಸ್ವಲ್ಪ ಹೊತ್ತು ಸಂಕಟ ಪಟ್ಟರು
ನಾನು ಸಚಿವ ಶ್ರೀರಾಮುಲು ಅವರ ಧಾಟಿಯಲ್ಲಿ `ಬಂಧುಗಳೇ', ಎಂದು ಒಂದು ಸಣ್ಣ ಭಾಷಣ ಮಾಡಿದೆ. `ಕ್ಯಾಮೆರಾ ಸಿಕ್ಕರೆ, ಸಿಕ್ಕವರು ಶಿವ ಆಗದೆ, ಕರ್ಣರಾಗಿ ಗಿರೀಶ ಅವರಿಗೆ ವಾಪಸ್ ಕೊಡಬೇಕು,' ಎಂದು ಹೇಳಿದೆ. ಮಹಾಜನತೆ ಚಪ್ಪಾಳೆ ಹೊಡೆದರೇ ಹೊರತು ಹುಡುಕಿ ಕೊಡಲಿಲ್ಲ
ಆದರೆ ಅದು ನಂತರ ಸಿಕ್ಕಿತು. ಅವರ ಬ್ಯಾಗಿನ ಮೂಲೆಯೊಂದರಲ್ಲಿ ಸೇರಿಕೊಂಡಿತ್ತು. ಅದರ ಮೇಲೆ ಟವೆಲ್, ಸೋಪ್, ಕಾಗದಗಳು, ಮತ್ತಿನ್ನೇನೋ ಇದ್ದಿದ್ದರಿಂದ ಅದು ಆಗ ಸಿಕ್ಕಿರಲಿಲ್ಲ.
ಈ ವಿಷ್ಯ ತಿಳಿದ ನಮ್ಮ ನೆಲದ ವಿಕಟಕವಿ ಹಾಗು ಪತ್ರಕರ್ತ ಬಂಡು ಕುಲಕರ್ಣಿ ಅವರು ಒಂದು ನೆನಪಿಡುವಂಥಹ ಮಾತು ಹೇಳಿದರು:" ಸಾಹಿತ್ಯ ಸಮ್ಮೇಳನದಲ್ಲಿ ಗಂಭೀರ ಗೋಷ್ಠಿಗಳು ಕೆಳಗೆ ಉಳಿದು ಅದರ ಮೇಲೆಲ್ಲಾ ಊಟ, ಶಾಪಿಂಗ್ ನಂತಹ ವಿಷಯ ಗಳೆಲ್ಲ ಬಿದ್ದು ಬಿಟ್ಟಾಗ, ಇದೇನು ಮಹಾ?''.
ಅಲ್ಲವೇ ಮತ್ತೆ?
-- ಹೂಬಳ್ಳಿಯಿಂದ ಹೃಷಿಕೇಶ ಬಹಾದ್ದೂರ್ ದೇಸಾಯಿ

Comments

Popular posts from this blog

``All Muslims are not Terrorists, But all Terrorists are Muslims''

Gowda and Gore

Black Buck resort in Bidar by Jungle Lodges and Resorts